ರಾಜಣ್ಣ ರಾಜೀನಾಮೆ ಅಲ್ಲ, ಸಂಪುಟದಿಂದಲೇ ವಜಾ!

ಕೆಎನ್‌ ರಾಜಣ್ಣ ರಾಜೀನಾಮೆ ಪಡೆಯದೇ ಸಿಎಂ ಸಿದ್ದರಾಮಯ್ಯ ಸಂಪುಟದಿಂದಲೇ ವಜಾ ಮಾಡಿದ್ದಾರೆ. ಹೌದು, ಆರಂಭದಲ್ಲಿ ಕೆಎನ್‌ ರಾಜಣ್ಣ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಬಂದಿತ್ತು. ಆದರೆ  ಅವರ ರಾಜೀನಾಮೆ ಏನು ಪಡೆಯಲಿಕ್ಕೆ ಏನಿದೆ? ಸಂಪುಟದಿಂದಲೇ ವಜಾಗೊಳಿಸಿ ಎಂದು ಸಿಎಂಗೆ ಹೈಕಮಾಂಡ್‌ ಸೂಚನೆ ನೀಡಿತ್ತು.

ಹೈಕಮಾಂಡ್‌ ಖಡಕ್‌ ಆದೇಶದಂತೆ ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತ ರಾಜಣ್ಣ ಅವರನ್ನು ವಜಾಗೊಳಿಸಿದ್ದಾರೆ. 

ಮುಜುಗರ ತಪ್ಪಿಸಲು ರಾಜೀನಾಮೆ ಪತ್ರ
ವಜಾಗೊಳಿಸುವ ಮುಜುಗರವನ್ನು ತಪ್ಪಿಸಲು ರಾಜಣ್ಣ ಅವರು ತಮ್ಮ ಪುತ್ರ, ಪರಿಷತ್‌ ಸದಸ್ಯ ರಾಜೇಂದ್ರ ಮೂಲಕ ಸಿಎಂಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ಆದರೆ ಹೈಕಮಾಂಡ್‌ ಖಡಕ್‌ ಸೂಚನೆಯ ಹಿನ್ನೆಲೆಯಲ್ಲಿ ಸಿಎಂ ರಾಜೀನಾಮೆ ಪತ್ರವನ್ನು ಅಂಗೀಕರಿಸದೇ ಸಂಪುಟದಿಂದಲೇ ವಜಾಗೊಳಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು.
ಸಿಎಂ ಶಿಫಾರಸಿನಂತೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ರಾಜಣ್ಣ ಅವರನ್ನು ವಜಾಗೊಳಿಸುವ ಗೆಜೆಟ್ ಅಧಿಸೂಚನೆಗೆ ಸಹಿ ಹಾಕಿದ್ದಾರೆ.