ಬೆಂಗಳೂರು: ಒಂದು ಕಡೆ ನಟಿ ರಮ್ಯಾ ಕುರಿತು ಅಶ್ಲೀಲ ಪೋಸ್ಟ್ ಎಫ್ಐಆರ್ ಆಗಿ ತನಿಖೆ ಆರಂಭವಾದ ಬೆನ್ನಲ್ಲೇ ಇತ್ತ ನಟ ಪ್ರಥಮ್ ಕೂಡ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಜು.22 ರಂದು ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ವ್ಯಕ್ತಿಯೊಬ್ಬ ಡ್ಯಾಗರ್ ತೋರಿಸಿ ಬೆದರಿಕೆ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಎಸ್ಪಿ ಕಚೇರಿಗೆ ಭೇಟಿ ನೀಡಿ ದೂರು ನೀಡಿದ್ದಾರೆ.
ಕಳೆದ ಶನಿವಾರ ಎಸ್ಪಿ, ಸಿ.ಕೆ ಬಾಬಾ ಭೇಟಿಯಾಗಿದ್ದ ಪ್ರಥಮ್ ಘಟನೆ ಬಗ್ಗೆ ಮಾಹಿತಿ ನೀಡಿದ್ದರು.
ನಿನ್ನೆ ಪುನಃ ಎಸ್ಪಿ ಭೇಟಿಯಾಗಿ ಲಿಖಿತ ದೂರು ನೀಡಿದ್ದಾರೆ. ಪ್ರಥಮ್ ದೂರಿನಲ್ಲಿ ರೌಡಿಶೀಟರ್ ಬೇಕರಿ ರಘು ಹಾಗೂ ಯಶಸ್ವಿನಿ ಮೇಲೆ ದೂರು ನೀಡಿದ್ದಾರೆ.
ದೇವಸ್ಥಾನಕ್ಕೆ ಹೋಗಿದ್ದ ವೇಳೆ ಕೆಲವು ವ್ಯಕ್ತಿಗಳು ಬಲವಂತವಾಗಿ ಕಾಡಿನ ಒಳಗೆ ಕರೆದೊಯ್ದರು.
ನಂತರ ಅಲ್ಲಿ ಹೋದಾಗ ದರ್ಶನ್ ಜೊತೆ ಜೈಲಿನಲ್ಲಿದ್ದ ವ್ಯಕ್ತಿಯೊಬ್ಬ ಇದ್ದು, ಡ್ಯಾಗರ್ ತೋರಿಸಿ ಬಾಸ್ ಬಗ್ಗೆ ಏನೇನೋ ಮಾತಾಡ್ತಿಯಾ ಅಂತಾ ಬೆದರಿಕೆ ಹಾಕಿದರು. ಈ ವೇಳೆ ಅಲ್ಲಿ ರಕ್ಷಕ್ ಬುಲೆಟ್ ಕೂಡ ಇದ್ದ ಅಂದಿದ್ದಾರೆ.
ಅಲ್ಲದೇ, ನಿನ್ನೆ ಸಂಜೆಯಿಂದ ದರ್ಶನ್ ಅಭಿಮಾನಿಗಳು ಟ್ರೋಲ್ ಮಾಡಲು ಶುರು ಮಾಡಿದ್ದು, ಇದರಿಂದ ವೈಯಕ್ತಿಕವಾಗಿ ತೋಜೋವಧೆ ಆಗ್ತಿದೆ. ಫ್ಯಾಮಿಲಿ ಡ್ಯಾಮೇಜ್ ಆಗ್ತಿದೆ.
ಕೂಡಲೇ ದರ್ಶನ್ ಅವರು ಬಂದು ಸ್ಟೇಟ್ಮೆಂಟ್ ಕೊಡಬೇಕು. ಅವರ ಆಭಿಮಾನಿಗಳಿಗೆ ವಿಡಿಯೋ ಮೂಲಕ ಬುದ್ದಿವಾದ ಹೇಳಬೇಕು ಎಂದು ಪ್ರಥಮ್ ಒತ್ತಾಯಿಸಿದ್ದಾರೆ.
ಟ್ರೋಲ್ಗಳಿಂದ ಬೇಸತ್ತ ಪ್ರಥಮ್, ಎಸ್ಪಿ ಕಚೇರಿ ಮುಂದೆಯೇ ಉಪವಾಸ ಕುಳಿತಿದ್ದರು. ಜಿಟಿಜಿಟಿ ಮಳೆಯಲ್ಲಿ ಉಪವಾಸ ಕೂತಿದ್ದು, ನ್ಯಾಯಕ್ಕಾಗಿ ಒತ್ತಾಯಿಸಿದರು.
ಬಳಿಕ ಎಎಸ್ಪಿಗಳಾದ ನಾಗರಾಜ್ ಮತ್ತು ವೆಂಕಟೇಶ್ ಪ್ರಸನ್ನ ಸ್ಥಳಕ್ಕೆ ಆಗಮಿಸಿ ಪ್ರಥಮ್ ಮನವೊಲಿಸಿ ಕಳಿಸಿದರು. ಅಲ್ಲದೇ, ಟ್ರೋಲ್ಗಳಿಂದ ಬೇಸತ್ತ ನಟ ಪ್ರಥಮ್ ಸಿನಿಮಾ ಮತ್ತು ಬೆಂಗಳೂರು ಬಿಡಲು ನಿರ್ಧಾರಿಸಿದ್ದಾರಂತೆ.
ಕೊಕೇನ್ ಸಿನಿಮಾ ಮುಗಿಸಿ ಚಾಮರಾಜನಗರಕ್ಕೆ ಹೋಗ್ತೀನಿ. ವೈಯಕ್ತಿಕ ತೋಜೋವಧೆಯಿಂದ ಕುಟುಂಬಕ್ಕೂ ಸಮಸ್ಯೆಯಾಗಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು
ಸದ್ಯ ನಟರೊಬ್ಬರ ಫ್ಯಾನ್ಸ್ ಚಾಟಿಂಗ್ ಮತ್ತು ಅಶ್ಲೀಲ ಪೋಸ್ಟ್ಗಳು ಸ್ಯಾಂಡಲ್ವುಡ್ನಲ್ಲಿ ತೀವ್ರ ಸಂಚಲನ ಉಂಟು ಮಾಡಿದ್ದು, ಈಗ ಪೊಲೀಸ್ ಠಾಣೆಯ ಮೆಟ್ಟಿಲೇರುವಂತೆ ಮಾಡಿದೆ.