ಅಪಪ್ರಚಾರಿಗಳನ್ನು ಬಂಧಿಸಿ,ಸಿಡಿದ ಧರ್ಮಸ್ಥಳದ ಭಕ್ತರು! ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳ (Dharmasthala) ಕ್ಷೇತ್ರಕ್ಕೆ ನಿರಂತರ ಅವಮಾನ ಮಾಡುತ್ತಿರುವುದನ್ನು ಖಂಡಿಸಿ ಕ್ಷೇತ್ರದ ಭಕ್ತರು ಸಿಡಿದೆದ್ದಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಧರ್ಮಸ್ಥಳದ ಗ್ರಾಮಸ್ಥರು ಧರ್ಮಸ್ಥಳ ಠಾಣೆಗೆ ಮುತ್ತಿಗೆ ಹಾಕಿ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಅಷ್ಟೇ ಅಲ್ಲದೇ ಕ್ಷೇತ್ರ ಬಗ್ಗೆ ಅಪಪ್ರಚಾರ ನಡೆಸಿದ್ದಕ್ಕೆ ಪಾಂಗಳ ಎಂಬಲ್ಲಿ ಮೂವರು ಯೂಟ್ಯೂಬರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಎರಡು ಗುಂಪುಗಳ ಮಧ್ಯೆ ಕಿತ್ತಾಟ ನಡೆಯುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಗ್ರಾಮಸ್ಥರು ಪ್ರತಿಭಟನೆ ಮುಂದಾಗಿದ್ದು ಯಾಕೆ?
ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದ್ದು ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಿದ್ದರು.
ಈ ಮಧ್ಯೆ ಯಾವಾಗ ಸಾಕ್ಷಿಧಾರ ತೋರಿಸಿದ 6ನೇ ಜಾಗದಲ್ಲಿ ಅಸ್ಥಿ ಸಿಕ್ಕಿತೋ ಆ ನಂತರ ಈ ಅಸ್ಥಿಯ ಬಗ್ಗೆ ಕೆಲ ಯೂಟ್ಯೂಬ್ ವಾಹಿನಿಗಳು ಸುಳ್ಳು ಸುದ್ದಿಗಳನ್ನು ಪ್ರಚಾರ ನಡೆಸಲು ಆರಂಭಿಸಿದವು.
5-6 ವ್ಯಕ್ತಿಗಳ ದೇಹ ಸಿಕ್ಕಿವೆ. ಮಹಿಳೆಯರ ಮೂಳೆಗಳು ಸಿಕ್ಕಿವೆ ಎಂದು ಅಪ್ರಚಾರ ನಡೆಸಲು ಆರಂಭಿಸಿದವು. ಸೋಮವಾರ ಅರಣ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೂಳೆಗಳು ಪತ್ತೆಯಾಗಿದ್ದವು.
ಇದು ಬೆಳಕಿಗೆ ಬರುತ್ತಿದ್ದಂತೆ ಧರ್ಮಸ್ಥಳ ಗ್ರಾಮಸ್ಥರೇ ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ ಎಂದು ಕೆಲ ಯೂಟ್ಯೂಬರ್ಗಳು ಸುದ್ದಿ ಮಾಡಿದ್ದರು.