Ballot Paper ಜಾರಿಗೆ ತರ್ತಿರೋದು ಮೂರ್ಖತನದ ಪರಮಾವಧಿ: ವಿಜಯೇಂದ್ರ! ಬೆಂಗಳೂರು: ಬ್ಯಾಲೆಟ್ ಪೇಪರ್ (Ballot Paper) ಜಾರಿಗೆ ತರುತ್ತಿರೋದು ಮೂರ್ಖತನದ ಪರಮಾವಧಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಕಿಡಿಕಾರಿದ್ದಾರೆ.
ಬ್ಯಾಲೆಟ್ ಪೇಪರ್ ಜಾರಿ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಗೆ (Congress) ಬ್ಯಾಲೆಟ್ ಪೇಪರ್ ನೆನಪಾಗಿದೆ.
ಇವಿಎಂ ಮೇಲೆ ವಿಶ್ವಾಸ ಕಡಿಮೆಯಾಗಿದೆ. ಯಾಕೆ ಅಂತ ಸಿಎಂ, ಡಿಸಿಎಂ ಹೇಳಬೇಕು. ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಿದೆ. ಜನನ ಅವರನ್ನು ತಿರಸ್ಕರಿಸಿದ್ದಾರೆ.
ಇದನ್ನು ಮುಚ್ಚಿಕೊಳ್ಳಲು ಇವಿಎಂ (EVM) ಸರಿ ಇಲ್ಲ ಎನ್ನುತ್ತಿದ್ದಾರೆ. ನಾವು ಬ್ಯಾಲೆಟ್ ಪೇಪರ್ಗೆ ಹೆದರುತ್ತಿಲ್ಲ, ಅದರ ಅವಶ್ಯಕತೆ ಇಲ್ಲ ಎಂದರು.
ಇವಿಎಂಗಳಲ್ಲಿ ದೋಷ ಇದ್ದಿದ್ದರೆ ಹಿಮಾಚಲಪ್ರದೇಶ, ತೆಲಂಗಾಣ, ಕರ್ನಾಟಕಗಳಲ್ಲಿ ಕಾಂಗ್ರೆಸ್ ಹೇಗೆ ಅಧಿಕಾರಕ್ಕೆ ಬಂತು? ಮಹಾರಾಷ್ಟ್ರ, ಹರಿಯಾಣಗಳಲ್ಲಿ ಸೋತಿರುವ ಕಾಂಗ್ರೆಸ್ ಹತಾಶೆಯಿಂದ ಬ್ಯಾಲೆಟ್ ಪೇಪರ್ ಜಾರಿಗೆ ತರುತ್ತಿದ್ದಾರೆ.
ಕಾಂಗ್ರೆಸ್ ಎಲ್ಲವನ್ನೂ ವಿರೋಧ ಮಾಡುತ್ತಿದೆ. ಬ್ಯಾಲೆಟ್ ಪೇಪರ್ ವಿರುದ್ಧ ಬಿಜೆಪಿಯಿಂದ ಹೋರಾಟ ಕೈಗೆತ್ತಿಕೊಳ್ಳುತ್ತೇವೆ ಎಂದು ತಿಳಿಸಿದರು.