CM; ಸಿದ್ದುಗೆ ಕ್ಲೀನ್ಚಿಟ್, ಡಿಕೆಶಿ ಬೆಂಬಲಿಗರ ವಿರುದ್ಧದ ಕೇಸ್ ವಾಪಸ್! ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿಯನ್ನೇ ಅಲುಗಾಡಿಸಿದ್ದ ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿದ್ದ ದೇಸಾಯಿ ವಿಚಾರಣಾ ಆಯೋಗ ವರದಿ ನೀಡಿದ್ದು, ವರದಿಯಲ್ಲಿ ಸಿಎಂ ಸಿದ್ದರಾಮಯ್ಯನವರ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಿದೆ.
ಇದೀಗ ವರದಿಯನ್ನು ಕ್ಯಾಬೀನೆಟ್ ಅಂಗೀಕರಿಸಿದೆ. ಇನ್ನೊಂದೆಡೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಬಲಿಗರ ವಿರುದ್ಧ ಪ್ರಕರಣಗಳನ್ನು ವಾಪಸ್ ಪಡೆಯಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಸಿದ್ದರಾಮಯ್ಯನವರ ನೇತೃತ್ವದಲ್ಲಿ ಇಂದು (ಸೆಪ್ಟೆಂಬರ್ 04) ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಕೆಲ ಮಹತ್ವದ ತೀರ್ಮಾನಗಳನ್ನ ಕೈಗೊಳ್ಳಲಾಗಿದೆ.
ಇದರಲ್ಲಿ ಡಿಕೆ ಶಿವಕುಮಾರ್ (DK Shivakumar) ಬೆಂಬಲಿಗರಿಗೆ ಸಂಬಂಧಿಸಿದ ಒಟ್ಟು 11 ಪ್ರಕರಣಗಳನ್ನು ಕೈಬಿಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಇನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಅಕ್ರಮ ಪ್ರಕರಣದಲ್ಲಿ (MUDA Scam Case) ಸಿಎಂ ಸಿದ್ದರಾಮಯ್ಯ (Siddaramaiah) ಕುಟುಂಬಕ್ಕೆ ನಿವೃತ್ತ ನ್ಯಾಯಾಧೀಶ ದೇಸಾಯಿ (judge P. N. Desai) ಕಮಿಟಿ ನೀಡಿದ ವರದಿಯಲ್ಲಿ ಕ್ಲೀನ್ ಚಿಟ್ ನೀಡಲಾಗಿದ್ದು, ಈ ವರದಿಯನ್ನು ಕ್ಯಾಬಿನೆಟ್ ಅಂಗೀಕರಿಸಿದೆ.
ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರ ವಿರುದ್ಧ ಪ್ರಕರಣಗಳನ್ನು ವಾಪಸ್ ಪಡೆಯಲು ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.
2019ರಲ್ಲಿ ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದ್ದ ಅವರ ಬೆಂಬಲಿಗರು ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದೀಗ ಈ 11 ಪ್ರಕರಣಗಳನ್ನು ವಾಪಸ್ ಪಡೆಯಲು ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ. ಇದರೊಂದಿಗೆ ಬೇರೆ ಬೇರೆ 62 ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆಯಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಿದ್ದರಾಮಯ್ಯ ಕುಟುಂಬಕ್ಕೆ ಕ್ಲೀನ್ ಚಿಟ್
ಇನ್ನು ಮುಡಾ ಹಗರಣದಲ್ಲಿ CM ಸಿದ್ದರಾಮಯ್ಯನವರ ಕುಟುಂಬ ಭಾಗಿಯಾಗಿದೆ ಎನ್ನುವ ಆರೋಪ ರಾಜ್ಯ ರಾಜಕಾರಣದಲ್ಲಿ ಭಾರೀ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಈ ಸಂಬಂಧ ಕೇಂದ್ರ ತನಿಖಾ ಸಂಸ್ಥೆಗಳು ತನಿಖೆ ನಡೆಸಿವೆ.
ಇದರ ನಡುವೆ ರಾಜ್ಯ ಸರ್ಕಾರ, ಮೂಡ ಪ್ರಕರಣದ ತನಿಖೆಗೆ ಪಿ.ಎನ್.ದೇಸಾಯಿ ನೇತೃತ್ವದ ಏಕ ಸದಸ್ಯ ಆಯೋಗ ರಚನೆ ಮಾಡಲಾಗಿತ್ತು.
ಇದೀಗ ವರದಿಯಲ್ಲಿ CM ಸಿದ್ದರಾಮಯ್ಯನವರ ಪಾತ್ರವಿಲ್ಲ ಎಂದು ಕ್ಲೀನ್ ಚಿಟ್ ನೀಡಲಾಗಿದ್ದು, ಪಿ.ಎನ್.ದೇಸಾಯಿ ವರದಿ ಇಂದಿನ ಕ್ಯಾಬಿನೆಟ್ ನಲ್ಲಿ ಅಂಗೀಕಾರವಾಗಿದೆ.
ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧವೇ ಆರೋಪ ಕೇಳಿಬಂದಿತ್ತು.
CM ಪತ್ನಿ ಪಾರ್ವತಿ ಮೂಡಾದಿಂದ ಪರ್ಯಾಯ ನಿವೇಶನ ಪಡೆದ ಫಲಾನುಭವಿಗಳಲ್ಲಿಒಬ್ಬರಾಗಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಕೋರ್ಟ್ ಮೊರೆ ಹೋಗಿದ್ದರು.
ತಮ್ಮ ಪತ್ನಿ ಒಡೆತನದಲ್ಲಿದ್ದ ನಾಲ್ಕು ಎಕರೆ ಜಮೀನನ್ನು ಅಕ್ರಮವಾಗಿ ತೆಗೆದುಕೊಂಡಿದ್ದು,
ಆಕೆಯ ಒಪ್ಪಿಗೆ ಇಲ್ಲದೆ ಲೇಔಟ್ ಅಭಿವೃದ್ಧಿ ಮಾಡಿದ್ದ ಮೂಡಾ ಪರಿಹಾರವಾಗಿ 14 ಪರ್ಯಾಯ ಪ್ಲಾಟ್ ಗಳನ್ನು ನೀಡಿರುವುದಾಗಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದರು ಹೇಳಿದ್ದರು.
ಆದರೂ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಸಿಎಂ ಪತ್ನಿ 14 ನಿವೇಶನಗಳನ್ನು ಮುಡಾಗೆ ವಾಪಸ್ ಮಾಡಿದ್ದರು.