ಸೋಮವಾರ ಮೈಸೂರಿಗೆ ರಾಷ್ಟ್ರಪತಿ ಮುರ್ಮು – ಅರಮನೆಗೆ ಭೇಟಿ! ಮೈಸೂರು: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಾಳೆ ಮೈಸೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಬರಲಿದ್ದಾರೆ.
ದ್ರೌಪದಿ ಮುರ್ಮು ರಾಷ್ಟ್ರಪತಿ ಆದ ನಂತರ ಎರಡನೇ ಬಾರಿಗೆ ಮೈಸೂರಿಗೆ (Mysuru) ಬರುತ್ತಿದ್ದಾರೆ.
ಕಳೆದ ಬಾರಿ ದಸರಾ ಉದ್ಘಾಟನೆಗೆಗಾಗಿ ದ್ರೌಪದಿ ಮುರ್ಮು ಮೈಸೂರಿಗೆ ಬಂದಿದ್ದರು. ನಾಳೆ ಮಧ್ಯಾಹ್ನ 3:20ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ರಾಷ್ಟ್ರಪತಿ ಆಗಮಿಸಲಿದ್ದು, ಸಿಎಂ ಸಿದ್ದರಾಮಯ್ಯ ರಾಷ್ಟ್ರಪತಿಗಳನ್ನು ಸ್ವಾಗತಿಸಲಿದ್ದಾರೆ.
ಅಲ್ಲಿಂದ ನೇರವಾಗಿ ರಾಷ್ಟ್ರಪತಿಗಳು ವಾಕ್ ಮತ್ತು ಶ್ರವಣ ಸಂಸ್ಥೆ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ರಾತ್ರಿ 8 ಗಂಟೆಗೆ ಚಾಮುಂಡಿ ಬೆಟ್ಟಕ್ಕೆ (Chamundi Hills) ಭೇಟಿ ನೀಡಿ ಚಾಮುಂಡಿ ತಾಯಿ ದರ್ಶನ ಪಡೆಯಲಿದ್ದಾರೆ.
ಸೆಪ್ಟೆಂಬರ್ 2ರಂದು ಬೆಳಗ್ಗೆ ಅರಮನೆಗೆ ಭೇಟಿ ನೀಡಿ ಕೆಲ ಕಾಲ ಅರಮನೆ (Mysuru Palace) ವೀಕ್ಷಿಸಲಿದ್ದಾರೆ. ನಂತರ ರಾಜವಂಶದ ಆತಿಥ್ಯ ಸ್ವೀಕರಿಸಲಿದ್ದಾರೆ.
ರಾಜವಂಶದ ಆತಿಥ್ಯ ಮುಗಿಸಿ ಅಲ್ಲಿಂದ ನೇರವಾಗಿ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದು ದೆಹಲಿಗೆ ತೆರಳಲಿದ್ದಾರೆ.
ರಾಷ್ಟ್ರಪತಿಗಳು ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದು, ಹೋಟೆಲ್ ಸುತ್ತ ಭದ್ರತೆ ಹೆಚ್ಚು ಮಾಡಿದ್ದಾರೆ. ರಾಷ್ಟ್ರಪತಿಗಳು ಸಂಚರಿಸುವ ಮಾರ್ಗಗಳ ರಸ್ತೆ ರಿಪೇರಿ ಕೂಡ ನಡೆದಿದೆ.
ಈ ನಡುವೆ ಲಲಿತ್ ಮಹಲ್ ರಸ್ತೆಯ 50ಕ್ಕೂ ಹೆಚ್ಚು ಅಂಗಡಿಗಳ ತೆರವು ಕಾರ್ಯಾಚರಣೆ ಪಾಲಿಕೆ ಸಿಬ್ಬಂದಿ ಮಾಡಿದಕ್ಕೆ ವ್ಯಾಪಾರಿಗಳು ಆಕ್ರೋಶ ಹೊರಹಾಕಿದ್ದಾರೆ.