ರಾಜತಾಂತ್ರಿಕ ಯಶಸ್ಸು – ಗಡಿಯಾಚೆಗಿನ ಭಯೋತ್ಪಾದನೆ ತಡೆಗೆ ಭಾರತಕ್ಕೆ ಚೀನಾ ಬೆಂಬಲ ಬೀಜಿಂಗ್: ಗಡಿಯಾಚೆಗೆ ಭಯೋತ್ಪಾದನೆ ತಡೆಯುವ ಭಾರತದ ಹೋರಾಟಕ್ಕೆ ಈಗ ಚೀನಾ ಕೂಡ ಬೆಂಬಲ ನೀಡಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಇದು ಭಯೋತ್ಪಾದನೆ ತಡೆಯುವ ಹೋರಾಟದಲ್ಲಿ ಭಾರತಕ್ಕೆ (India) ಮತ್ತೊಂದು ರಾಜತಾಂತ್ರಿಕ ಯಶಸ್ಸು ಸಿಕ್ಕಂತಾಗಿದೆ.
7 ವರ್ಷಗಳ ಬಳಿಕ ಚೀನಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಟಿಯಾಂಜಿನ್ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದು,
ಹಲವು ಮಹತ್ವದ ವಿಚಾರಗಳನ್ನ ಪ್ರಸ್ತಾಪಿಸಿದ್ದಾರೆ. ಅಲ್ಲದೇ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ (Xi Jinping) ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಈ ಕುರಿತು ಇಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಜಿನ್ಪಿಂಗ್ ಅವರೊಂದಿಗೆ ಮಾತುಕತೆಯ ಸಮಯದಲ್ಲಿ ಪ್ರಧಾನಿ ಮೋದಿ (Narendra Modi) ಗಡಿಯಾಚೆಗಿನ ಭಯೋತ್ಪಾದನೆ ತಡೆಯುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ ಎಂದು ತಿಳಿಸಿದ್ದಾರೆ.

ಉಭಯ ನಾಯಕರ ನಡುವಿನ ಸಭೆಯು ಭಾರತ ಮತ್ತು ಚೀನಾ ದೇಶಗಳ ದೇಶಿಯ ಅಭಿವೃದ್ಧಿಯನ್ನು ಕೇಂದ್ರಿಕರಿಸಿದೆ.
ಹೀಗಾಗಿ ಸ್ನೇಹಪರ ಸಂಬಂಧಗಳು ಯಥಾ ಸ್ಥಿತಿಯಲ್ಲಿ ಮುಂದುವರಿಯಲಿವೆ, ಗಡಿಯಲ್ಲಿ ಶಾಂತಿ ಇರಲಿದ್ದು, ದ್ವಿಪಕ್ಷಿಯ ಸಂಬಂಧಗಳು 2.8 ಶತಕೋಟಿ ಜನರಿಗೆ ಪ್ರಯೋಜನ ನೀಡಲಿವೆ ಎಂದಿದ್ದಾರೆ.
ಅಲ್ಲದೇ ಪರಸ್ಪರ ಸಹಕಾರ ಬಲಪಡಿಸಲು ಚೀನಾ ಅಧ್ಯಕ್ಷರು ನಾಲ್ಕು ಸಲಹೆಗಳನ್ನ ನೀಡಿದ್ದಾರೆ. ಇದಕ್ಕೆ ಮೋದಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಇದೇ ಸಂದರ್ಭದಲ್ಲಿ ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಪ್ರಸ್ತಾಪಿಸಿದ ಮೋದಿ, ಗಡಿಯಲ್ಲಿ ಶಾಂತಿ, ಸ್ಥಿರತೆ ಅಗತ್ಯ ಎಂದು ಒತ್ತಿ ಹೇಳಿದರು.
ಬಳಿಕ ಪರಸ್ಪರ ಅಭಿವೃದ್ಧಿ, ವ್ಯಾಪಾರ ಸಮತೋಲನ, ಭಯೋತ್ಪಾದನೆ ವಿರುದ್ಧದ ಹೋರಾಟ ಹಾಗೂ ಜನರಿಂದ ಜನರ ಸಂಪರ್ಕ ಹೆಚ್ಚಿಸುವ ವಿಷಯಗಳ ಬಗ್ಗೆ ಒಟ್ಟಾಗಿ ಸಾಗುವ ಕುರಿತು ಚರ್ಚೆ ನಡೆಯಿತು.
ಕೊನೆಯಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ಒಟ್ಟಾಗಿ ಕೆಲಸ ಮಾಡಲು ಉಭಯ ನಾಯಕರು ಒಪ್ಪಿಕೊಂಡಿರುವುದಾಗಿ ತಿಳಿಸಿದರು.
2026ರ ಬ್ರಿಕ್ಸ್ ಶೃಂಗಸಭೆಗೆ ಆಹ್ವಾನ ಕೊಟ್ಟ ಮೋದಿ
ಮುಂದುವರಿದು ಮಾತನಾಡಿದ ವಿಕ್ರಮ್ ಮಿಶ್ರಿ, ಜಾಗತಿಕ ವಿಷಯಗಳ ಬಗ್ಗೆಯೂ ಚರ್ಚಿಸಿದ ವಿಶ್ವನಾಯಕರು ವಿಶ್ವವ್ಯಾಪಾರ ಸ್ಥಿರಗೊಳಿಸುವಲ್ಲಿ ಭಾರತ ಮತ್ತು ಚೀನಾದ ಪಾತ್ರದ ಬಗ್ಗೆಯೂ ಚರ್ಚಿಸಿದರು.
ಇದೇ ವೇಳೆ ನರೇಂದ್ರ ಮೋದಿ ಅವರು 2026ಕ್ಕೆ ಭಾರತದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗೆ ಕ್ಸಿ ಜಿನ್ಪಿಂಗ್ ಅವರನ್ನು ಆಹ್ವಾನಿಸಿದರು.
ಇದರೊಂದಿಗೆ ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಬೇಕಾದ ಉಪಕ್ರಮಗಳ ಬಗ್ಗೆ ಒತ್ತಿ ಹೇಳಿದರು.